ಗಿರೀಶ್ ಕಾರ್ನಾಡ್ (೧೯ ಮೇ ೧೯೩೮ - ೧೦ ಜೂನ್ ೨೦೧೯) ಭಾರತದ ನಾಟಕಕಾರರು, ಲೇಖಕರು, ರಂಗಕರ್ಮಿ, ಸಿನಿಮಾನಟ,ನಿರ್ದೇಶಕ, ಚಿಂತಕ ಹಾಗೂ ಹೋರಾಟಗಾರರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ. == ಜೀವನ == ಗಿರೀಶ ಕಾರ್ನಾಡ್‌ರು ೧೯೩೮ ಮೇ ೧೯ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ॥ ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿಶೀಲ ಮನೋಭಾವದ ಡಾ॥ ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದುಕೊಂಡರು. ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ ೫ ವರ್ಷದ ಮಗ ವಸಂತನ ತಾಯಿ ಕೃಷ್ಣಾಬಾಯಿಯನ್ನು, ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಕೈ ಹಿಡಿದರು. ಸಮಾಜ ಏನೆನ್ನುತ್ತದೆ ಅನ್ನುವುದಕ್ಕಿಂತ ಆದರ್ಶ ಹಾಗೂ ಪ್ರಗತಿಪರತೆ ರಘುನಾಥ್ ಕಾರ್ನಾಡರಲ್ಲಿ ಕಂಡು ಬರುತ್ತದೆ. ಮುಂದೆ ಕಾರ್ನಾಡರಿಗೆ ಇಂಥ ಪ್ರಗತಿಪರ ವಾತಾವರಣವೇ ಅವರ ಬೆಳವಣಿಗೆಯಲ್ಲಿ ಸಹಾಯಕವಾಯಿತು. ಗಿರೀಶರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು. ಆ ಬಳಿಕ ರ್ಹೊಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಆಗಿದ್ದಾರೆ. ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರ್ತಿಸಿಕೊಂಡ ಕಾರ್ನಾಡ್ ಬುದ್ಧಿಜೀವಿ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು. ಇವರು ಕನ್ನಡವಲ್ಲದೆ ಹಿಂದಿ, ಪಂಜಾಬಿ, ಮರಾಠಿ ಹಾಗೂ ಭಾರತೀಯ ಹಲವು ಭಾಷೆಗಳಿಗೆ ತಮ್ಮ ನಾಟಕಗಳು ಅನುವಾದಗೊಂಡು, ಪ್ರದರ್ಶನಗೊಂಡವು. ಆಕ್ಸ್‌ಫರ್ಡ್‌ನಿಂದ ಬಂದ ನಂತರ ಮದ್ರಾಸ್‌ನಲ್ಲಿ ಆಕ್ಸ್ ಫ಼ರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಸಂಪಾದಕರಾಗಿ ನೌಕರಿಯಲ್ಲಿದ್ದು, ಅದನ್ನು ತೊರೆದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ನಡೆಸಿದರು. == ನಾಟಕ ರಚನೆ == ಇಂಗ್ಲೆಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡರ ಮೊದಲ ಸಾಹಿತ್ಯ ಕೃತಿ ಯಯಾತಿ ನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲೆಂಡಿನಿಂದ ಮರಳಿದ ಬಳಿಕ ತುಘಲಕ್ ಹಾಗೂ ಹಯವದನ ಪ್ರಕಟವಾದವು. ಈ ನಡುವೆ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‍ನ ನಿರ್ದೇಶಕರಾಗಿದ್ದು, ಮತ್ತೆ ಅದನ್ನು ಬಿಟ್ಟು ಮುಂಬಯಿಗೆ ಬಂದ ಕಾರ್ನಾಡರು ಕೆಲವು ಚಲನಚಿತ್ರಗಳಲ್ಲಿ ನಟಿಸಿದರು. ಆ ರಂಗವನ್ನೂ ತ್ಯಜಿಸಿ ಮತ್ತೆ ಬೆಂಗಳೂರಿಗೆ ಬಂದರು. ಅಲ್ಲಿಂದ ರಚಿತವಾದ ಅವರ ನಾಟಕಗಳು-ಅಂಜು ಮಲ್ಲಿಗೆ, ನಾಗಮಂಡಲ, ತಲೆದಂಡ ಹಾಗೂ ಅಗ್ನಿ ಮತ್ತು ಮಳೆ. === ನಾಟಕಗಳು === ಮಾ ನಿಷಾಧ - ಏಕಾಂಕ ನಾಟಕ ಯಯಾತಿ - ೧೯೬೧ ತುಘಲಕ್ - ೧೯೬೪ ಹಯವದನ - ೧೯೭೨(ನಾಟ್ಯರಂಗ ಪ್ರಶಸ್ತಿ ) ಅಂಜುಮಲ್ಲಿಗೆ - ೧೯೭೭ ಹಿಟ್ಟಿನ ಹುಂಜ ಅಥವಾ ಬಲಿ - ೧೯೮೦ ನಾಗಮಂಡಲ - ೧೯೯೦ ತಲೆದಂಡ - ೧೯೯೩ ಅಗ್ನಿ ಮತ್ತು ಮಳೆ - ೧೯೯೫ ಟಿಪ್ಪುವಿನ ಕನಸುಗಳು - ೧೯೯೭ ಒಡಕಲು ಬಿಂಬ - ೨೦೦೫ ಮದುವೆ ಅಲ್ಬಮ್ ಫ್ಲಾವರ್ಸ - ೨೦೧೨ ಬೆಂದ ಕಾಳು ಆನ್ ಟೋಸ್ಟ- ೨೦೧೨ ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್‍ಗಾಗಿ ಭಾರತದ ಸ್ವಾತಂತ್ರೋತ್ಸವದ ೫೦ ವರ್ಷದ ನೆನಪಿನ ಕಾರ್ಯಕ್ರಮಕ್ಕಾಗಿ ಬರೆದುಕೊಟ್ಟ ನಾಟಕ-ಟಿಪ್ಪುವಿನ ಕನಸುಗಳು. == ಆತ್ಮ ಚರಿತ್ರೆ == ಆಡಾಡತ ಆಯುಷ್ಯ (೨೦೧೧) == ಚಿತ್ರರಂಗ == 'ಸಂಸ್ಕಾರ'(೧೯೭೦) ಚಲನಚಿತ್ರವು ಕನ್ನಡದ ಪ್ರಥಮ ಕಲಾತ್ಮಕ ಚಲನಚಿತ್ರ. ಯು.ಆರ್.ಅನಂತಮೂರ್ತಿಯವರ ಕಾದಂಬರಿಯನ್ನು ಆಧರಿಸಿದ ಈ ಚಲನಚಿತ್ರದಲ್ಲಿ ಗಿರೀಶ ಕಾರ್ನಾಡರದು ಪ್ರಮುಖ ಪಾತ್ರ-ಪ್ರಾಣೇಶಾಚಾರ್ಯರದು. ಪಿ.ಲಂಕೇಶ ಅವರದು ವಿರುದ್ಧ ವ್ಯಕ್ತಿತ್ವದ ಪಾತ್ರ-ನಾರಣಪ್ಪನದು. ಈ ಚಿತ್ರದ ನಿರ್ದೇಶಕರು ಪಟ್ಟಾಭಿರಾಮರೆಡ್ಡಿ ಅವರು ಮತ್ತು ಚಿತ್ರಕಥೆ ಗಿರೀಶ ಕಾರ್ನಾಡರದ್ದು. ಇದು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲವನ್ನು ತಂದು ಕೊಟ್ಟ ಚಿತ್ರ. ಆ ನಂತರ ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಆಧರಿಸಿ, ಬಿ. ವಿ. ಕಾರಂತರ ಜೊತೆಗೂಡಿ ವಂಶವೃಕ್ಷ(೧೯೭೨) ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರ ಪಡೆಯಿತು. ನಿರ್ಮಾಣ: ಜಿ.ವಿ.ಅಯ್ಯರ್. ಮುಂದೆ 'ತಬ್ಬಲಿಯು ನೀನಾದೆ ಮಗನೆ'(೧೯೭೭), 'ಕಾಡು'(೧೯೭೪), 'ಒಂದಾನೊಂದು ಕಾಲದಲ್ಲಿ'(೧೯೭೮) ಚಿತ್ರಗಳನ್ನು ನಿರ್ದೇಶಿಸಿದರು. 'ಕಾಡು' ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು. ನಂತರ ಉತ್ಸವ್, ಗೋಧೂಳಿ ಎಂಬ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು. ಬಳಿಕ ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿಯನ್ನು ಆಧರಿಸಿ "ಕಾನೂರು ಹೆಗ್ಗಡಿತಿ"(೧೯೯೯) ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು. ಇದಲ್ಲದೆ ಕನಕ ಪುರಂದರ, ದ.ರಾ.ಬೇಂದ್ರೆ ಹಾಗು ಸೂಫಿ ಪಂಥ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು. ಪರಿಸರ ವಿನಾಶ ಕುರಿತು ಚೆಲುವಿ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದರು. ೨೦೦೭ರಲ್ಲಿ ತೆರೆಕಂಡ ಆ ದಿನಗಳು ಚಿತ್ರಕ್ಕೆ ಅಗ್ನಿ ಶ್ರೀಧರ ಅವರ ಜೊತೆಗೂಡಿ ಚಿತ್ರಕಥೆಯನ್ನು ಬರೆದಿದ್ದಾರೆ. == ಇತರೆ == ಕಾರ್ನಾಡ್ ಅವರಿಗೆ ಪ್ರಶಸ್ತಿ ಬಂದಾಗ ಸೌಜನ್ಯದಿಂದಲೇ ಮರಾಠಿಯ ವಿಜಯತೆಂಡೂಲ್ಕರ್ ಅವರಂಥವರಿಗೆ ಈ ಪ್ರಶಸ್ತಿ ಬರಬೇಕಿತ್ತು ಎಂದು ಹೇಳಿ ದೊಡ್ಡತನ ಮೆರೆದಿದ್ದರು. ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಾದಂಬರಿಗಳನ್ನು ಕುವೆಂಪುರ ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಯು ಆರ್ ಅನಂತಮೂರ್ತಿಯವರ ಸಂಸ್ಕಾರ ಸಿನಿಮಾ ಮಾಡಿದ ಏಕೈಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಂಬ ಗೌರವಕ್ಕೆ ಕಾರ್ನಾಡ್ ಪಾತ್ರರಾಗಿದ್ದಾರೆ. ತಮ್ಮ ೪೨ರ ವಯಸ್ಸಿನಲ್ಲಿ ಕೊಡಗಿನ ವೀರಯೋಧ ಕೋದಂಡೇರ ಗಣಪತಿಯವರ ಪುತ್ರಿ, ಡಾ. ಸರಸ್ವತಿ ಗಣಪತಿಯವರನ್ನು ಅಧಿಕೃತವಾಗಿ ಮದುವೆಯಾದ ಗಿರೀಶರಿಗೆ ೨ ಮಕ್ಕಳು, ಶಾಲ್ಮಲಿ ರಾಧಾ ಮತ್ತು ರಘು ಅಮಯ್. ೧೦ ವರ್ಷಗಳ ಕಾಲ, ಲಿವ್-ಇನ್ ಆಗಿ ಸಂಸಾರ ನಡೆಸಿದ ಹಿರಿಮೆ ಕಾರ್ನಾಡರದು. ತುಘಲಕ್ ನಾಟಕವನ್ನು ತಮ್ಮ ಮಿತ್ರ ಮತ್ತು ಸಹಾಯಕ ನಿರ್ದೇಶಕ ಕೃಷ್ಣ ಬಸರೂರುರೊಡಗೂಡಿ ಬರೆದಿದ್ದಾಗಿ, ಆ ನಾಟಕದ ಅರ್ಪಣೆಯಲ್ಲಿ ಹೇಳಿದ್ದಾರೆ. ಒಂದಾನೊಂದು ಕಾಲದಲ್ಲಿ ಚಿತ್ರವನ್ನು ೧೯೭೭ರಲ್ಲಿ ನಿರ್ದೇಶಿಸುವಾಗ ಕಳರಿಪಯಟ್ಟು ಮತ್ತು ಮುಂತಾದ ಸಾಹಸಕಲೆಗಳನ್ನು ಮೊದಲ ಬಾರಿ ಕನ್ನಡ ತೆರೆಯಲ್ಲಿ ಅಳವಡಿಸಿದ ಹಿರಿಮೆ ಕಾರ್ನಾಡರದ್ದು. "ಕಾರ್ನಾಡರು ವಸ್ತುವನ್ನು ಗ್ರಹಿಸುವ ಕ್ರಮದಲ್ಲೇ ಅವರ ಅನನ್ಯತೆ ಇದೆ. ಈ ಗ್ರಹಿಕೆಗೆ ಪೂರಕವಾದ ರಚನಾಕ್ರಮವನ್ನು ಅವರು ಕಂಡುಕೊಂಡಿದ್ದಾರೆ. ಒಂದು ಸಮಸ್ಯೆಯನ್ನು ನಾಟಕ ರೂಪಕ್ಕೆ ಒಗ್ಗಿಸಿಕೊಂಡು ಅದಕ್ಕೊಂದು ಕೊಟ್ಟು ಜನರ ಮುಂದಿಡುವುದರಲ್ಲೇ ನಾಟಕಕಾರನ ಸೋಲು ಗೆಲುವು ಎರಡೂ ಅಡಗಿದೆ." ಎಂದು ಕಾರ್ನಾಡರ ನಾಟಕಗಳ ವಸ್ತು, ಗ್ರಹಿಕೆ ಬಗ್ಗೆ ಭಾರತೀಯ ರಂಗಭೂಮಿಯ ಹಿರಿಯ ನಿರ್ದೇಶಕ ಬಿ. ವಿ. ಕಾರಂತರು ದಾಖಲಿಸುತ್ತಾರೆ. == ಕಾರ್ನಾಡರು ಅಭಿನಯಿಸಿದ ಪ್ರಮುಖ ಚಲನಚಿತ್ರಗಳು == == ಅಭಿನಯಿಸಿದ ತೆಲುಗು ಚಿತ್ರಗಳು == ಚೈತನ್ಯ -೧೯೯೧ ಪುಲಿ - ೨೦೧೦ ಪ್ರೇಮಿಕುಡು(:ప్రేమికుడు) ಆನಂದಭೈರವಿ(:ఆనంద భైరవి) ರಕ್ಷಕುಡು(:రక్షకుడు) ಧರ್ಮ ಚಕ್ರಂ(:ధర్మచక్రం) -೧೯೯೬ ಶಂಕರ್ ದಾದಾ ಎಂ.ಬಿ.ಬಿ.ಎಸ್(:శంకర్ దాదా ఎం.బి.బి.ఎస్.) -೨೦೦೪ ಗುಣ - ೧೯೯೧ ಕೊಂಡೂರ - ೧೯೭೮ == ಪ್ರಶಸ್ತಿ, ಸನ್ಮಾನಗಳು == ಸಿನಿಮಾ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ -೧೯೭೪ ಪದ್ಮಭೂಷಣ -೧೯೯೨ ಜ್ಞಾನಪೀಠ -೧೯೯೮ ಕಾಳಿದಾಸ ಸಮ್ಮಾನ್ - ೧೯೯೮ ಕಾರ್ನಾಡ್ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ೧೯೮೮-೯೩ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನೆಹರು ಸೆಂಟರ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ೨೦೦೮ -೦೯ ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮಂಡಳಿ ಘೋಷಿಸಿದ್ದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಪ್ರಶಸ್ತಿಯನ್ನು ಗಿರೀಶ್ ಕಾರ್ನಾಡ್ ನಿರಾಕರಿಸಿದ್ದಾರೆ . ಜೀವಮಾನದ ಸಾಧನೆಗಾಗಿ ಕೆ.ಎಸ್.ಆರ್.ದಾಸ್ ಅವರಿಗೆ ನೀಡಲಾಗಿದ್ದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಕೆಲ ಕ್ಷಣಗಳಲ್ಲಿಯೇ ಹಿಂದಕ್ಕೆ ಪಡೆದು ಅದನ್ನು ಗಿರೀಶ್ ಕಾರ್ನಾಡ್ ಅವರಿಗೆ ನೀಡಲಾಗಿತ್ತು.(ದಾಸ್ ಅವರಿಗೆ ಪ್ರಶಸ್ತಿ ನೀಡಿದ್ದನ್ನು ಘೋಷಿಸಿದ ಕೂಡಲೆ "ಕೆ.ಎಸ್.ಆರ್.ದಾಸ್" ಅವರು ಕನ್ನಡ ಚಿತ್ರರಂಗಕ್ಕೆ ಹೆಚ್ಚಿನ ಸೇವೆ ಸಲ್ಲಿಸಿಲ್ಲವೆಂಬುದು ಪತ್ರಕರ್ತರಿಂದ ಪ್ರತಿಭಟನೆ ವ್ಯಕ್ತವಾಗಿದ್ದರಿಂದ ಅದನ್ನು ಕೂಡಲೆ ಹಿಂದೆ ಪಡೆದು ಅದನ್ನು ಕಾರ್ನಾಡ್ ಅವರಿಗೆ ಭಾರ್ಗವ ನೀಡಿದ್ದರು). ಟಾಟಾ ಲಿಟರೇಚರ್ ಲೈವ ಜೀವಮಾನ ಸಾಧನೆ (ಚಿತ್ರೋದ್ಯಮ)-2017 ಡಾ.ಟಿ.ಎಂ.ಎ.ಪೈ ವಿಶಿಷ್ಟ ಕೊಂಕಣಿ ಸಾಧಕ ಪ್ರಶಸ್ತಿ (1996) == ನಿಧನ == ಗಿರೀಶ್ ಕಾರ್ನಾಡ್ ಅವರು ದಿನಾಂಕ ೧೦-೬-೨೦೧೯ರಂದು ಬೆಂಗಳೂರಿನಲ್ಲಿ ಮರಣ ಹೊಂದಿದರು. == ಹೊರ ಸಂಪರ್ಕಕೊಂಡಿಗಳು == ಹೊಸ ಪರಂಪರೆಗೆ ಮೇಲ್ಪಂಕ್ತಿ ಹಾಕಿದ ನಾಯಕ ಕಾರ್ನಾಡ- ಲೇ:ಪ್ರೊ.ಜಿ.ಕೆ. ಗೋವಿಂದರಾವ್ == ಉಲ್ಲೇಖಗಳು ==